Sunday, February 23, 2014

ಮಂಗನ ಕಾಯಿಲೆ - ಒಂದು ಬಯಲಾಜಿಕಲ್ ವೆಪನ್ !


ಮಂಗನ ಕಾಯಿಲೆ ಮತ್ತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಕಾಣಿಸಿಕೊಂಡಿದೆ. ಕನ್ನಂಗಿ ಸುತ್ತಮುತ್ತಲ ಗ್ರಾಮಗಳಲ್ಲಿ  ಕೆಲವರಿಗೆ ಈ ಕಾಯಿಲೆ ಬಂದಿದ್ದು, ಒಬ್ಬರು ಮೃತಪಟ್ಟಿರುವುದಾಗಿಯೂ ವರದಿಯಾಗಿದೆ. ಪ್ರತಿ ಬೇಸಿಗೆಯಲ್ಲಿಯೂ ಮಲೆನಾಡಿನ ಒಂದಲ್ಲಾ ಒಂದು ಕಡೆ ಕಾಣಿಸಿಕೊಂಡು ಕನಿಷ್ಠ ಒಂದಿಬ್ಬರ ಬಲಿ ತೆಗೆದುಕೊಳ್ಳುತ್ತಿರುವ ಈ ಕಾಯಿಲೆ ಆರು ದಶಕಗಳ ಹಿಂದೆ ಮುಂದುವರೆದ ದೇಶಗಳು ನಡೆಸಿದ ‘ಜೈವಿಕ ಅಸ್ತ್ರ’ಗಳ ಪ್ರಯೋಗದ ಫಲ. ಇದರ ಪರಿಣಾಮ ಮಲೆನಾಡಿಗರು ಈಗಲೂ ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ.
  `ಕ್ಯಾಸನೂರು ಕಾಡಿನ ಕಾಯಿಲೆ' ಎಂದೇ ಹೆಸರು ಮಾಡಿರುವ ಮಂಗನ ಕಾಯಿಲೆಗೆ ಕಾರಣವಾಗುವ ವೈರಸ್ಸನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಜೈವಿಕ ಅಸ್ತ್ರವಾಗಿ (biological weapon) ಬಳಸಲಾಗುತ್ತಿದೆ ಎಂಬ ಎಚ್ಚರಿಕೆ ನೀಡಿದ್ದರೂ, ಸರಕಾರಗಳ ಬಳಿ ಈ ಬಗ್ಗೆ ಮಾಹಿತಿಯೇ ಇಲ್ಲ.ಈ ಕಾಯಿಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದರಿಂದಲೇನೋ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ರೋಗ ಬಾರದಂತೆ ತಡೆಯುವ ಲಸಿಕೆ ತಯಾರಿಸಲು ಶಿವಮೊಗ್ಗದಲ್ಲಿದ್ದ ಪ್ರಯೋಗಾಲಯ ದಶಕಗಳ ಹಿಂದೆಯೇ ಬಾಗಿಲು ಮುಚ್ಚಿಕೊಂಡಿದೆ.
  ಇತ್ತೀಚೆಗೆ ಇದ್ದಕ್ಕಿದ್ದ ಹಾಗೇ ಉಲ್ಭಣಗೊಳ್ಳುವ ಈ ರೋಗಾಣು ಬಗ್ಗೆ ಹೆದರಿರುವ ಪಾಶ್ಚಿಮಾತ್ಯರಾಷ್ಟ್ರಗಳು ಇದು ತಮ್ಮ ದೇಶಗಳಿಗೆ ಪ್ರವೇಶಿಸದಂತೆ ಎಚ್ಚರಿಕೆ ಕ್ರಮ ತೆಗೆದುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯ  ಡ್ರಗ್ಸ್ ಮತ್ತು ಕ್ರೈಂ ವಿಭಾಗ ಈ ರೋಗಾಣುವನ್ನು ಜೈವಿಕ ಅಸ್ತ್ರವಾಗಿ ಬಳಸಲ್ಪಡುವ ಏಜೆಂಡ್ (Biological Warfare Agent) ಎಂದು ಹೆಸರಿಸಿ ಅಲರ್ಟ್ ಘೋಷಿಸಿದೆ. ವಿಶ್ವಸಂಸ್ಥೆ 2009ರಲ್ಲಿ ಬಿಡುಗಡೆ ಮಾಡಿರುವ ಸಾಗಾಣಿಕೆ ಕೈಪಿಡಿಯಲ್ಲಿಯೂ ಇದರ ಬಗ್ಗೆ ಎಚ್ಚರಿಕೆಯ ಸೂಚನೆಗಳಿವೆ. ಅಮೆರಿಕ ತನ್ನ ಬಯೊಸೇಫ್ಟಿ ಲೆವೆಲ್4 (ಬಿಎಸ್ಎಲ್-4)ರ ಅಡಿಯಲ್ಲಿ ಈ ರೋಗಾಣುವನ್ನು ಗುರುತಿಸಿದೆ.
ಆದರೆ ನಮ್ಮ ರಾಜ್ಯದಲ್ಲಿ ಈ ರೋಗಾಣು ಹರಡದಂತೆ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೋಗ ಪ್ರತಿ ವರ್ಷ ಮರುಕಳಿಸುತ್ತಲೇ ಇದೆ.  2005ರ ಮಾರ್ಚ್ ನಲ್ಲಿ  ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು.ನಾನು ಈ ಬಗ್ಗೆ ಬರೆದಿದ್ದ ವರದಿಯನ್ನು ಉಲ್ಲೇಖಿಸಿ ಆಗ ತೀರ್ಥಹಳ್ಳಿಯ ಶಾಸಕರಾಗಿದ್ದ ಆರಗ ಜ್ಞಾನೇಂದ್ರ ಈ ಕುರಿತು ಗಮನ ಸೆಳೆದಿದ್ದರು. ಈ ರೋಗಾಣು ಜೈವಿಕ ಅಸ್ತ್ರವಾಗಿ ಬಳಸಲ್ಪಟ್ಟಿತ್ತೇ ಎಂಬುದರ ಕುರಿತು ತನಿಖೆ ನಡೆಸುವುದಾಗಿ ಸರಕಾರ ಭರವಸೆ ಕೂಡ ನೀಡಿತ್ತು. ನಂತರ `ಈ ಬಗ್ಗೆ ಮಾಹಿತಿ ಇಲ್ಲ' ಎಂದು ಷರಾ ಬರೆದು ಅಧಿಕಾರಿಗಳು ಸುಮ್ಮನಾಗಿದ್ದಾರೆ. ಈ ರೋಗ ಮಾತ್ರ ಪ್ರತಿವರ್ಷ ಮಲೆನಾಡಿನ ಜನರನ್ನು ಕಾಡುತ್ತಲೇ ಇದೆ.

 ಕಾಯಿಲೆ ಬಂದಿದ್ದು ಹೇಗೆ?

ಮಂಗನ ಕಾಯಿಲೆ ಎಂದೇ ಕರೆಯಲ್ಪಡುತ್ತಿರುವ ಈ ಕಾಯಿಲೆಯನ್ನು `ಅಂಥ್ರ್ಯಕ್ಸ್' ನಂತೆ ಜೈವಿಕ ಅಸ್ತ್ರವಾಗಿ ಬಳಸಲಾಗಿತ್ತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರೆತಿವೆ. ಶೀತಲ ಸಮರದ ಸಂದರ್ಭದಲ್ಲಿ ವೈರಿ ದೇಶಗಳನ್ನು ಮಣಿಸಲು ಜೈವಿಕ ಅಸ್ತ್ರಗಳನ್ನು ಸಿದ್ಧಪಡಿಸಿದ ಅಮೆರಿಕ ಅವುಗಳ ಪ್ರಯೋಗವನ್ನು ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ನಡೆಸಿತ್ತು. ವಲಸೆ ಹೋಗುವ ಹಕ್ಕಿಗಳ ಮೂಲಕ ವಿಷಾಣುಗಳನ್ನು ಶತ್ರುದೇಶಗಳಿಗೆ ತಲುಪಿಸುವ ತಂತ್ರ ರೂಪಿಸಿತ್ತು. ಇದಕ್ಕಾಗಿ ಹಕ್ಕಿಗಳ ಸಮೀಕ್ಷೆ ಕೂಡ ನಡೆಸಲಾಗಿತ್ತು.
ಕ್ಯಾಸನೂರಿನ ಹಳೆಯ ಚಿತ್ರ
  ಈ ರೋಗ 1957ರಲ್ಲಿ ಮೊದಲು ಕಾಣಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ರಕ್ಷಿತಾರಣ್ಯ ಮತ್ತು ಸುತ್ತಮುತ್ತಲಿನ ಕಾಡುಗಳಲ್ಲಿ. ಇಲ್ಲಿಯೇ ಇರುವ ಗುಡವಿ ಪಕ್ಷಿಧಾಮಕ್ಕೆ ರಷ್ಯಾದ ಕಡೆಯಿಂದ ಹಕ್ಕಿಗಳು ವಲಸೆ ಬರುತ್ತವೆ. ಈ ಹಕ್ಕಿಗಳ ಮೂಲಕ ಕ್ಯಾಸನೂರು ಕಾಡಿನ ಕಾಯಿಲೆಗೆ ಕಾರಣವಾಗುವ ವಿಷಾಣುಗಳನ್ನು ಕಳುಹಿಸಲಾಗಿತ್ತು. ಇದು ಪುಣೆಯ ವಿಷಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ನ್ಯೂಯಾರ್ಕ್ನ ರಾಕ್ಫೆಲರ್ ಸಂಶೋಧನಾಲಯದ ನೆರವಿನಿಂದ  ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.
  ಗುಡವಿ ಪಕ್ಷಿಧಾಮಕ್ಕೆ ರಷ್ಯಾದ ಕಡೆಯಿಂದ ಹಕ್ಕಿಗಳು ವಲಸೆ ಬರುವುದನ್ನು ತಿಳಿದೇ ಈ ಪ್ರಯೋಗ ನಡೆಸಲಾಗಿತ್ತು. (ಯಾವಾಗಲೂ ಜೈವಿಕ ಅಸ್ತ್ರಗಳ ಪ್ರಯೋಗಕ್ಕೆ ಕಡಿಮೆ ಜನಸಂಖ್ಯೆ ಯಿರುವ ಮಲೆನಾಡಿನಂತಹ ಪ್ರದೇಶವನ್ನೇ ಆಯ್ಕೆಮಾಡಿಕೊಳ್ಳಲಾಗುತ್ತದೆ) ವಲಸೆ ಹಕ್ಕಿಗಳಿಂದ ಮಂಗಗಳಿಗೆ ಮಂಗನಿಂದ ಉಣ್ಣೆಗಳ ಮೂಲಕ ಮನುಷ್ಯನಿಗೆ ಈ ರೋಗಾಣು ಹರಡಿ ಮನುಷ್ಯನ ಬಲಿ ಪಡೆದಿದ್ದವು. ಅಂದಿನಿಂದಲೂ ಸಾಯದ ಈ ವೈರಾಣುಗಳು ಈಗ ಮಲೆನಾಡಿನಾದ್ಯಂತ ಹರಡಿವೆ. ಈ ರೀತಿ ನಮ್ಮ ಮಲೆನಾಡಿಗೆ ವೈರಾಣು ಕಳಿಸಿದವರು ನಂತರ ಪುಣೆಯ ವಿಜ್ಞಾನಿಗಳನ್ನೂ ಇಲ್ಲಿಗೆ ಕಳುಹಿಸಿ, ಇದು ಹೇಗೆ ಕೆಲಸಮಾಡಿದೆ ಎಂಬುದರ ಬಗ್ಗೆ ವರದಿಯನ್ನೂ ತರಸಿಕೊಂಡರು. ವಿಜ್ಞಾನಿಗಳ ತಂಡದಲ್ಲಿದ್ದ ಸದಸ್ಯರ ಭಿನ್ನಾಭಿಪ್ರಾಯದಿಂದಾಗಿ ಈ ವಿಷಯ ಬಹಿರಂಗಗೊಂಡಿತ್ತು. ಇದ್ಯಾವುದರ ಬಗ್ಗೆಯೂ ಅರಿವಿರದ ನಾವು, ವಿಜ್ಞಾನಿಗಳು ನಮ್ಮ ನೆರವಿಗೆ ಬಂದಿದ್ದರು, ಈ ಕಾಯಿಲೆಗೆ ಔಷಧಿ ಕಂಡುಹಿಡಿಯಲಿದ್ದಾರೆ ಎಂದೇ ನಂಬಿಕೊಂಡು ಬಂದಿದ್ದೆವು.
ಕಾಯಿಲೆಗೆ ಕಾರಣವಾಗುವ ಮಂಗಗಳಲ್ಲಿ ಇದ್ದ ವಿಷಾಣುಗಳು ರಷ್ಯಾದ ‘ವಸಂತ ಗ್ರೀಷ್ಮ ಮಸ್ತಿಷ್ಕ ರೋಗ’ (Russian Spring Summer Encephalitis) ವಿಷಾಣುವಿಗೆ ಅತಿ ಸಮೀಪದ ವಿಶಿಷ್ಟ ವಿಷಾಣುವೆಂದು ಗುರುತಿಸಲ್ಪಟ್ಟು, ‘ಕ್ಯಾಸನೂರು ಫಾರೆಸ್ಟ್ ಡಿಸೀಸ್ ವೈರಸ್’ ಎಂದು ಹೆಸರಿಸಲ್ಪಟ್ಟಿತ್ತು. ಮೊದಲ ಕೆಲ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ರೋಗ ಮುಂದೆ ಚಿಕ್ಕಮಗಳೂರು, ದಕ್ಷಿಣಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗೂ ಹರಡಿ ನೂರಾರು ಜನರನ್ನು ಬಲಿತೆಗೆದುಕೊಂಡಿತ್ತು. ಈಗಲೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ.


70ರ ದಶಕದಲ್ಲಿ ಅಮೆರಿಕ ಈ ಪ್ರಯೋಗ ನಡೆಸಿದ್ದನ್ನು  ಮಾಧ್ಯಮಗಳು ಬೆಳಕಿಗೆ ತಂದಾಗ (ಮುಖ್ಯವಾಗಿ ಅಮೆರಿಕದನ್ ಬಿಸಿ ಟಿವಿ) ಅಮೆರಿಕ ಸೇನೆಯ ಪರವಾಗಿ ಕೆಲಸಮಾಡುವ ಸ್ಮಿತ್ ಸೊನಿಯನ್ ಸಂಸ್ಥೆಯ ಸಹ ಕಾರ್ಯದರ್ಶಿಯೊಬ್ಬರು ಹಕ್ಕಿಗಳ ಮೂಲಕ ವಿಷಾಣುಗಳನ್ನು ಕಳುಹಿಸುವುದರಿಂದ ಶೇ. 97ರಷ್ಟು  ಖಚಿತವಾಗಿ ಗುರಿ ತಲುಪಬಹುದು ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದ್ದರು.
  ಮಲೆನಾಡಿನಲ್ಲಿ ಮಂಗನ ಕಾಯಿಲೆ ತೀವ್ರಗೊಂಡು ಜನ ಸಾಯುತ್ತಿದ್ದಂತೆಯೇ ಕೂಡಲೇ ಎಚ್ಚೆತ್ತ ಬ್ರಿಟನ್ ಸೇನೆ ಈ ರೋಗಾಣುವನ್ನು `ಜೈವಿಕ ಅಸ್ತ್ರ' ಎಂದು ಮೊದಲು ಘೋಷಿಸಿತು. ಪಿಟ್ಸ್ ಬರ್ಗ್ ವಿಶ್ವ ವಿದ್ಯಾಲಯದ ವೈದ್ಯಕೀಯ ವಿಭಾಗ, ವಾಷಿಂಗ್ಟನ್  ಸ್ಟೇಟ್ ವಿವಿಯ ಮೈಕ್ರೋಬಯಲಾಜಿ, ಅಮೆರಿಕ ಮೆಡಿಕಲ್ ಅಸೋಸಿಯೇಷನ್, ವಿಜ್ಞಾನಿಗಳ ಒಕ್ಕೂಟ ಈ ಬಗ್ಗೆ ಅಧ್ಯಯನ ನಡೆಸಿ, ಇದೊಂದು ಜೈವಿಕ ಅಸ್ತ್ರ ಎಂದು ಸಾರಿವೆ. ಈಗಲೂ ಈ ಕಾಯಿಲೆ ಬಗ್ಗೆ ಮಾಹಿತಿ ತರಿಸಿಕೊಂಡು, ಪರಿಣಾಮಗಳನ್ನು ವಿಶ್ಲೇಷಿಸುತ್ತಿವೆ. ಅಮೆರಿಕದ ಮೆಡಿಕಲ್ ಅಸೋಸಿಯೇಷನ್ ತನ್ನ ಜರ್ನಲ್ ನಲ್ಲಿ ನಮ್ಮ ಮಂಗನ ಕಾಯಿಲೆ ಬಗ್ಗೆ ವಿವವರವಾದ ಲೇಖನ ಬರೆದಿದೆ!
  ಭಾರತ ಸಕಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಗಾಗ ಬರುವ ಸಾಮಾನ್ಯ ಕಾಯಿಲೆಯಂತೆ ಮಂಗನ ಕಾಯಿಲೆಯನ್ನೂ ಪರಿಗಣಿಸಿರುವ  ಆರೋಗ್ಯ ಇಲಾಖೆ ಈ ರೋಗ ಬಾರದಂತೆ ತಡೆಯಲು ಇರುವ ಲಸಿಕೆಯನ್ನು ನೀಡುವುದೇ ತನ್ನ ಜವಾಬ್ದಾರಿ ಎಂದು ಕೊಂಡಿದೆ. ಯಾವುದೋ ದೇಶ ಕಳುಹಿಸಿದ ರೋಗಾಣುಗಳಿಗೆ ಮಲೆನಾಡಿಗರು ಬಲಿಯಾಗುತ್ತಲೇ ಇದ್ದಾರೆ.