Wednesday, June 15, 2011

ಸೋತ ಕಾಂಗ್ರೆಸ್


`ರಾಜ್ಯ ಕಾಂಗ್ರೆಸ್ ಸತ್ತು ಮಲಗಿದ್ದರೆ ಮರುಜೀವ ಕೊಡುವ ಕೆಲಸ ಮಾಡಬಹುದಿತ್ತು. ಆದರೆ ಸತ್ತಂತೆ ಮಲಗಿದೆ. ಹೀಗಾಗಿ ಎಚ್ಚರಿಸುವುದು ಕಷ್ಟ' ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಖಾಸಗಿಯಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಸಾಂಸ್ಥಿಕ ಚುನಾವಣೆ ಹಳ್ಳ ಹಿಡಿದಿರುವುದನ್ನು ನೋಡಿದರೆ ಇದು ನಿಜವೆನಿಸುತ್ತಿದೆ. ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರೇ ಆಸಕ್ತಿ ವಹಿಸಿ, ಪ್ರಚಾರಕ್ಕೆ ಬಂದು ಅಭಿಯಾನಕ್ಕೆ ಚಾಲನೆ ನೀಡಿದ್ದರೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ. ಪಕ್ಷದ ಹಿರಿಯ ನಾಯಕರಿಗೆ ಬಿಸಿರಕ್ತದವರು ಪಕ್ಷಕ್ಕೆ ಬರುವುದು ಬೇಡ. ಹೀಗಾಗಿ ಅಭಿಯಾನ ನಡೆಯುವಾಗ ಮನೆ ಬಿಟ್ಟು ಹೊರಬರಲಿಲ್ಲ. ಪರಿಣಾಮ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡವರ ಸಂಖ್ಯೆ 6.25 ಲಕ್ಷ ಮಾತ್ರ. ಗುರಿ ಇದ್ದಿದ್ದು ಎಷ್ಟು ಗೊತ್ತೇ, 37ಲಕ್ಷ !

18ರಿಂದ 35ವರ್ಷದೊಳಗಿನ ಯುವಜನರನ್ನು ಭಾರಿ ಪ್ರಮಾಣದಲ್ಲಿ ಪಕ್ಷಕ್ಕೆ ಸೇರಿಸಿಕೊಂಡು,ಹೊಸ ಶಕ್ತಿ ತುಂಬುವುದು ರಾಹುಲ್ ಗಾಂಧಿಯವರ ಉದ್ದೇಶವಾಗಿತ್ತು. ನಟಿ ರಮ್ಯಾ ಮತ್ತಿತರ ಸೇರ್ಪಡೆ ಕಾಂಗ್ರೆಸ್ ಬೆಂಬಲಿಗರಲ್ಲಿ ಹುರುಪು ಮೂಡಿಸಿತ್ತು. ಎಲ್ಲ ಬೆಳವಣಿಗೆಯಿಂದ ಕಾಂಗ್ರೆಸ್ ಯುವಜನತೆಯ ಪಕ್ಷವಾಗಲಿದೆಯೇ ಎಂದು ರಾಜಕೀಯ ಆಸಕ್ತರೆಲ್ಲಾ ಲೆಕ್ಕಾಚಾರ ಹಾಕುತ್ತಿದ್ದರು. ಆದರೆ ಕಾಂಗ್ರೆಸ್ ಚಿಗುರುವ ಲಕ್ಷಣವನ್ನೇನೂ ತೋರಲಿಲ್ಲ.

ರಾಜ್ಯದಲ್ಲಿ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಸದಸ್ಯತ್ವ ಅಭಿಯಾನ ನಡೆದಿದೆ. ನೆಲೆಯನ್ನೇ ಹೊಂದಿರದ ತಮಿಳುನಾಡಿನಲ್ಲಿಯೇ 17 ಲಕ್ಷ ಯುವಜನರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 16 ಲಕ್ಷ , ಬಲವಾದ ಕಾರ್ಯಕರ್ತರ ಪಡೆ ಇದ್ದರೂ ಚಿಕ್ಕ ರಾಜ್ಯದ ಕೇರಳದಲ್ಲಿ ಕೂಡ ಐದು ಲಕ್ಷ ಯುವಜನತೆ ಪಕ್ಷದತ್ತ ಕೈ ಚಾಚಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ಹೀಗೇಕಾಯಿತು? ನಾಯಕರನ್ನು ಕೇಳಿದರೆ ಕಾಗಕ್ಕ- ಗುಬ್ಬಕ್ಕನ ಕತೆ ಹೇಳುತ್ತಿದ್ದಾರೆ. ರಾಜ್ಯದಲ್ಲಿ 47 ಸಾವಿರ ಬೂತ್ ಗಳಲ್ಲಿ ಶೇ. 70 ಬೂತ್ ಗಳಲ್ಲಿಯಾದರೂ ಯುವ ಕಾಂಗ್ರೆಸ್ ಘಟಕ ತೆರೆಯುವ ಉದ್ದೇಶವನ್ನು ಪಕ್ಷ ಹೊಂದಿತ್ತು. ಎಷ್ಟು ಕಡೆ ಚುನಾವಣೆ ನಡೆದು ಅಧ್ಯಕ್ಷರ ಆಯ್ಕೆ ನಡೆಯುತ್ತದೆಯೋ ಕಾದು ನೋಡಬೇಕು. ರಾಜಕೀಯ ಪಕ್ಷದ ಕತೆ ಇರಲಿ, ರಾಜ್ಯದ ಯುವ ಜನತೆ ರಾಜಕೀಯದಿಂದ ದೂರವಾಗುತ್ತಿರುವುದರ ಸೂಚನೆಯನ್ನು ಇದು ನೀಡುತ್ತಿದೆಯೇ?

No comments:

Post a Comment